“ನನ್ನ ಜ್ಞಾಪಕ ಚಿತ್ರಶಾಲೆ” ಯ ಸಂಪುಟಗಳಲ್ಲಿ ಇದು, ಇಂದಿನ ದೇಶಪರಿಸ್ಥಿತಿಯಲ್ಲಿ, ಮಿಕ್ಕ ಸಂಪುಟಗಳಿಗಿಂತ ಕೊಂಚ ಹೆಚ್ಚು ತುರ್ತಿನದೆಂದು ನನಗನ್ನಿಸಿದೆ. ಏಕೆಂದರೆ ಇದರ ವಿಷಯವು ರಾಜಕೀಯ. ನಮ್ಮ ರಾಜಕೀಯವು ಹದಕ್ಕೆ ಬಂದಲ್ಲದೆ ನಮ್ಮ ದೇಶ ಜೀವನದ ಯಾವ ಅಂಶವೂ ಹದಕ್ಕೆ ಬರಲಾರದೆಂದು ನನ್ನ ನಂಬಿಕೆ. ನಮಗೆ ತಕ್ಕ ರಾಜ್ಯಕ್ರಮವೆಂಥಾದ್ದೆಂಬುದನ್ನು ನಾವು ಇನ್ನೂ ಕಂಡುಕೊಳ್ಳಬೇಕಾಗಿದೆ. ಆ ಪ್ರಶ್ನೆಯನ್ನು ವಿಚಾರ ಮಾಡಲಿಚ್ಛಿಸುವವರಿಗೆ ಉಪಯುಕ್ತವಾಗಬಹುದಾದ ಸಾಮಗ್ರಿ ಈ ಪುಸ್ತಕದಲ್ಲಿ ಒಂದಷ್ಟು ಇದ್ದೀತು. ಈ ಗ್ರಂಥದಲ್ಲಿ ದಿವಾನ್ ರಂಗಾಚಾರ್ಯರಿಂದ ನ್ಯಾಪತಿ ಮಾಧವರಾಯರವರೆಗೆ ಮೈಸೂರಿನ ರಾಜ್ಯಾಡಳಿತವನ್ನು ನಡಸಿದ ದಿವಾನರುಗಳ ಗುಣಶೀಲಗಳ, ಆಡಳಿತ ನೀತಿಗಳ ಚಿತ್ರಣವಿದೆ. ಅವರ ಆಡಳಿತದ ಗುರಿಯೇನಾಗಿತ್ತು, ಅವರ ಕಾಲದಲ್ಲಿ ಪ್ರಜೆಗಳು ನೆಮ್ಮದಿಯಿಂದ ಇದ್ದರೆ, ಇಂದಿನ ಸ್ಥಿತಿ ಏನಾಗಿದೆ ಎಂಬುದನ್ನು ವಿವೇಚಿಸುವ, ಜನಮನವನ್ನು ಪ್ರಚೋದಿಸುವ ಪೀಠಿಕಾ ಉಪಸಂಹಾರ ರೂಪವಾದ ಪ್ರಬಂಧಗಳೂ ಇವೆ.