ಮೈಸೂರು ಸಂಸ್ಥಾನದಲ್ಲಿ ಸಮಸ್ತರಲ್ಲಿಯೂ ಈಚೆಗೆ ಸ್ವದೇಶೋನ್ನತಿಯ ಚಿಂತೆಯು ಹೆಚ್ಚಾಗಿ ತಲೆದೋರುತ್ತಿದೆಯಷ್ಟೆ. “ಇದು ನಮ್ಮ ರಾಜ್ಯ, ಇದರ ಏಳಿಗೆಯೂ ನಮ್ಮ ಸ್ವಂತ ಏಳಿಗೆಯೂ ಅಭೇದ್ಯವಾಗಿ ಸಂಬಂಧಪಟ್ಟಿವೆ. ದೇಶಾಭಿವೃದ್ಥಿಯ ಕಾರ್ಯಗಳು ತೃಪ್ತಿಕರವಾಗಿ ನಡೆದ ಹೊರತು ನಮ್ಮ ಅಭಿವೃದ್ಧಿಯು. ನಿಜವಾಗಿ ಆಗಲಾರದು” – ಎಂಬ ಭಾವನೆಯು ಜನರಲ್ಲಿ ಈಗ ವಿಶೇಷವಾಗಿ ಹರಡಿಯೂ ಹರಡುತ್ತಲೂ ಇದೆ. ಇದಕ್ಕೆ ಶ್ರೀಮನ್ಮಹಾರಾಜರವರೂ, ಅವರ ಸರ್ಕಾರದವರೂ ತೋರುತ್ತಿರುವ ಪ್ರಜಾಭಿಮಾನವೇ ಕಾರಣವೆಂಬುದರಲ್ಲಿ, ಸಂಶಯವಿಲ್ಲ. ಲೆಜಿಸ್ಲೇಟಿವ್ ಕೌನ್ಸಿಲ್ ಮುಂತಾದ ರಾಜಕೀಯ ಸಭೆಗಳಲ್ಲಿಯೂ, ಇತರ ಮಾರ್ಗಗಳಲ್ಲಿಯೂ ಪ್ರಜಾಪ್ರಮುಖರು ಮುಂದಕ್ಕೆ ಬಂದು, ದೇಶಸೇವೆ ಮಾಡಲು ಅವಕಾಶಗಳುಂಟಾಗಿರುವುದರಿಂದಲೂ, ಪ್ರಜಾಭಿಪ್ರಾಯಕ್ಕೆ ಈಗ ಗೌರವವು ಹೆಚ್ಚಿರುವುದರಿಂದಲೂ, ದೇಶಾಭ್ಯುದಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಸರ್ವರಿಗೂ ಕರ್ತವ್ಯವಾಗಿದೆ. ಪ್ರಕೃತ ಸ್ಥಿತಿಯನ್ನು ವಿಚಾರಿಸದೆಯೇ ಪುರೋಭಿವೃದ್ಧಿಯ ಮಾರ್ಗಗಳನ್ನು ನಿಶ್ಚಯಿಸುವುದು ಸುಲಭವಲ್ಲ. ಪ್ರಕೃತ ಸ್ಥಿತಿಯನ್ನು ಸಾಧ್ಯವಾದಷ್ಟು ವಿಶದವಾಗಿ ತಿಳಿಸಬೇಕೆಂಬುದೇ ಈ ಪುಸ್ತಕದ ಉದ್ದೇಶ್ಯ. ವಿಷಯಾನುಕ್ರಮಣಿಕೆಯನ್ನು ನೋಡುವುದರಿಂದ ಇದರಲ್ಲಿ ಎಷ್ಟು ಬಗೆಯ ವಿಷಯಗಳು ಸಂಗ್ರಹಿಸಲ್ಪಟ್ಟಿವೆಯೆಂಬುದು ಗೋಚರವಾಗುವುದು.