ಆಯ್ದಕ್ಕಿ ಲಕ್ಕಮ್ಮನ ಸಂಪೂರ್ಣ ವಚನ ಸಂಗ್ರಹ
ಆಯ್ದಕ್ಕಿ ಲಕ್ಕಮ್ಮನು ಹನ್ನೆರಡನೆಯ ಶತಮಾನದಲ್ಲಿ ಕನ್ನಡನಾಡಿನಲ್ಲಿದ್ದ ಶಿವಶರಣೆ. ಆಯ್ದಕ್ಕಿ ಲಕ್ಕಮ್ಮ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಅಮರೇಶ್ವರ ಗ್ರಾಮದ ಸ್ವಾಭಿಮಾನಿ ಹೆಣ್ಣು. ಆಯ್ದು ತಂದ ಅಕ್ಕಿಯಿಂದ ತಿನಸುಉಣಿಸುಗಳನ್ನು ತಯಾರು ಮಾಡಿ, ಪ್ರತಿದಿನ ತಮ್ಮ ಮನೆಗೆ ಬರುವ ಶಿವಶರಣಶರಣೆಯರಿಗೆ ದಾಸೋಹ ಮಾಡುವುದನ್ನೇ ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯ ದಂಪತಿಗಳು ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಬತ್ತ/ರಾಗಿ ಮುಂತಾದ ಬೆಳೆಗಳನ್ನು ಕುಯ್ದು, ಅರಿಗಳನ್ನು ಒಣಗಿಸಿ, ಹೊರೆಗಳನ್ನು ಕಟ್ಟುವಾಗ ಹೊರೆಯಿಂದ ಕಳಚಿಕೊಂಡು ಹೊಲಗದ್ದೆಗಳಲ್ಲಿ ಬಿದ್ದಿರುವ ತೆನೆಯನ್ನು “ಅಕ್ಕಲು” ಎಂದು ಕರೆಯುತ್ತಾರೆ. ಇಂತಹ ತೆನೆಗಳನ್ನು ಬಡವರು ಆಯ್ದುಕೊಂಡು ತಂದು ತಮ್ಮ ಹೊಟ್ಟೆಪಾಡನ್ನು ನೀಗಿಸಿಕೊಳ್ಳುತ್ತಾರೆ. ಈ ರೀತಿ ಬಿದ್ದಿರುವ ತೆನೆಗಳನ್ನು ಆಯ್ದುಕೊಳ್ಳುವ ಕೆಲಸವನ್ನು “ಅಕ್ಕಲಾಯುವುದು” ಎನ್ನುತ್ತಾರೆ. ಚೆಲ್ಲಾಡಿ ಬಿದ್ದಿರುವ ಅಕ್ಕಿಯನ್ನು ಆಯ್ದು ತರುವುದು ಒಂದು ಕಸುಬು. ಇಷ್ಟದೈವ-ಆಮರೇಶ್ವರ. ಮಾರಯ್ಯ ಪ್ರಿಯ ಅಮರೇಶ್ವರಲಿಂಗ ಎಂಬುದು ಇವರ ವಚನಗಳ ಅಂಕಿತವಾಗಿದೆ. ಅಂಕಿತದಲ್ಲಿ ಬರೆದ ೨೫ ವಚನಗಳು ಈಗ ದೊರೆತಿವೆ. ಎಲ್ಲವೂ ಕಾಯಕ ಮತ್ತು ದಾಸೋಹದ ಮಹಿತಿಯನ್ನು ಎತ್ತಿ ಹೇಳುತ್ತವೆ. ಲಕ್ಕಮ್ಮ ಹಿಡಿಯಕ್ಕಿ ಯಿಂದಲೇ ಒಂದು ಲಕ್ಷದ ತೊಂಬತ್ತಾರು ಸಾವಿರದ ಜಂಗಮರಿಗೆ ಊಟ ನೀಡಿ ಬಸವಣ್ಣನವರಿಂದ ಸೈಎನಿಸಿಕೊಂಡವಳು. ಶರಣರೆಲ್ಲ ಆಕೆಯ ಪವಾಡಕ್ಕೆ ಮೂಕ ವಿಸ್ಮಿತ ರಾಗಿ ಭಕ್ತಿಯ ಮುಂದೆ ಎಲ್ಲವೂ ಮಿಥ್ಯವೆಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಒಮ್ಮೆ ಸಾಕ್ಷಾತ್ ಶಿವನೇ ಜಂಗಮ ರೂಪದಲ್ಲಿ ಬಂದು, ಅಸಾಧ್ಯ ಚಳಿಯನ್ನೂ ಸೃಷ್ಠಿಸಿ ನಡುಗುತ್ತಾ, ಶಿವಭಕ್ತರಾದ ಇವರಿಬ್ಬರು ಉಟ್ಟ ಬಟ್ಟೆಯೇ ಬೇಕೆಂದು ಕೇಳಿ ತೊಟ್ಟುಕೊಂಡು ಅವರ ಭಕ್ತಿಗೆ ಮೆಚ್ಚುಗೆ ಸೂಚಿಸಿದನಂತೆ. ಆಯ್ದಕ್ಕಿ ಲಕ್ಕಮ್ಮನ ವಚನಗಳಲ್ಲಿ ಆತ್ಮೋದ್ಧಾರ, ಲೋಕೋದ್ಧಾರ ಗಳೆಂಬ ದ್ವಿಮುಖ ಆಶಯ, ಕಾಯಕತತ್ವ, ನಿಶ್ಚಲ ನಿಲುವು, ಜ್ಞಾನದ ಅರಿವು, ಸಮತಾಭಾವ, ಇತರರ ಒಳ್ಳೆತನವನ್ನೇ ಪ್ರಶ್ನಿಸುವ ದಿಟ್ಟತನ, ಅತಿಯಾಸೆ ಒಳ್ಳೆಯದಲ್ಲವೆಂಬ ನಿಲುವು, ಆಕೆಯ ಅಚಲ ಆತ್ಮವಿಶ್ವಾಸ, ನಿರ್ಮಲ ವ್ಯಕ್ತಿತ್ವದ ಅನಾವರಣವಿದೆ.
For any issues / concerns / feedback please reach out to us at vishaya.in@gmail.com OR contact form in https://vishaya.in
Oxirgi yangilanish
5-iyl, 2024