ವಿವಿಧ ಕಲಾ ಪ್ರಕಾರಗಳಲ್ಲಿ ಆಸಕ್ತಿ ಹೊಂದಿರುವ ಸೌಜನ್ಯ ದತ್ತರಾಜ ಅವರು ಪ್ರಥಮ ಕವನ ಸಂಕಲನವನ್ನು ಹೊರತರುತ್ತಿದ್ದಾರೆ. ತೀವ್ರವಾದ ಪ್ರೇಮ, ವಿರಹ ಮತ್ತು ನೆನಪುಗಳನ್ನು ಒಳತಿರುಳಾಗಿಸಿಕೊಂಡ ಕವಿತೆಗಳು ಹಾಗೂ ಕೆಲವು ಬೇರೆ ಬೇರೆ ವಸ್ತುಗಳನ್ನೊಳಗೊಂಡ ಕವಿತೆಗಳು ಇಲ್ಲಿವೆ. ಹೆಚ್ಚಿನವು ಹೆಣ್ಮನಸಿನ ಹಂಬಲ, ತಲ್ಲಣ, ಕಂಪನಗಳನ್ನು ಧ್ವನಿಸುತ್ತವೆ. 'ಅಪಾರ್ಟ್ಮೆಂಟಿನ ಕಾಂಪೌಂಡು', 'ದುಡಿಯುತ್ತಲೇ ಹೋದ', 'ಇದ್ದೇ ಇರುತ್ತಾರೆ' ಇಂಥ ಕೆಲವು ಕವನಗಳು ಬದುಕಿನ ವಿಪರ್ಯಾಸ, ವಿಡಂಬನೆಗಳನ್ನು ಚಿತ್ರಿಸುತ್ತವೆ. 'ಅರಿವು', 'ಹೂವು' ಮತ್ತು ಕೆಲವು ಕವನಗಳಲ್ಲಿ ತಾತ್ತ್ವಿಕತೆಯ ನೆರಳೂ ಇದೆ. ಇವುಗಳನ್ನೆಲ್ಲ ಯಾವುದೇ ಬಂಡಾಯ, ಘೋಷಣೆಗಳಿಲ್ಲದೇ ಕವಯತ್ರಿ ವಿನೀತವಾಗಿಯೇ ಹೇಳಿದ್ದಾರೆ. ಕವಿತೆಗಳಲ್ಲಿ ಬರುವ ಚಂದ್ರ, ಸೂರ್ಯ, ಭೂಮಿ, ಬಾನು, ಕೃಷ್ಣ ರಾಧೆಯರ ರೂಪಕ ಹಾಗೂ ಉಪಮೆಗಳೂ ಸೌಮ್ಯ ಭಾವದಲ್ಲಿಯೇ ಇವೆ. ಇದು ಸೌಜನ್ಯರ ಸೂಕ್ಷ್ಮತೆ, ಸಂವೇದನಾಶೀಲತೆ ಹಾಗೂ ಬದುಕಿನ ಪ್ರತಿಯೊಂದು ಕ್ಷಣದ ಆಸ್ವಾದನಶಕ್ತಿಯನ್ನು ಸಾಬೀತುಪಡಿಸುತ್ತದೆ.