ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು - ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ ೧೦೮ ಪುಟಗಳ ಈ ಪುಸ್ತಕಗಳಲ್ಲಿ - ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ. ಆಯಾ ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು-ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.
A Kannada book by Akshara Prakashana / ಅಕ್ಷರ ಪ್ರಕಾಶನ
ಕಾಸರಗೋಡಿನ ಸಮೀಪದ ಹಳ್ಳಿಯಲ್ಲಿ 1940-41ರ ಸುಮಾರಿಗೆ ಜನಿಸಿದ ಕೆ.ವಿ. ತಿರುಮಲೇಶ್ ನೀರ್ಚಾಲು, ಕಾಸರಗೋಡು ಮತ್ತು ತಿರುವನಂತಪುರಗಳಲ್ಲಿ ಅಭ್ಯಾಸ ಮಾಡಿ ಹೈದರಾಬಾದಿನಲ್ಲಿ ಭಾಷಾವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ ನಡೆಸಿದರು. ಬಳಿಕ ಅವರು ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಅನೇಕ ವರ್ಷ ಅಧ್ಯಾಪನ ವೃತ್ತಿ ಮಾಡಿದರು; ಅಮೇರಿಕ ಮತ್ತು ಅರೇಬಿಯಾಗಳಲ್ಲೂ ಅವರು ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ‘ಮಹಾಪ್ರಸ್ಥಾನ‘, ‘ಮುಖಾಮುಖಿ‘, ‘ಅವಧ‘, ‘ಪಾಪಿಯೂ‘ ಮೊದಲಾದ ಕವನ ಸಂಕಲನಗಳನ್ನೂ ಹಾಗೂ ‘ನಾಯಕ ಮತ್ತು ಇತರರು‘, ‘ಜಾಗುವಾ ಮತ್ತು ಇತರರು‘, ‘ಕಳ್ಳಿಗಿಡದ ಹೂ‘ ಮೊದಲಾದ ಕಥಾಸಂಕಲನಗಳನ್ನೂ ಇವರು ಪ್ರಕಟಿಸಿದ್ದಾರೆ. ‘ಅಸ್ತಿತ್ವವಾದ‘, ‘ಸಮ್ಮುಖ‘, ‘ಉಲ್ಲೇಖ‘ - ಇವರ ವಿಮರ್ಶಾ ಸಂಕಲನಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇರಳದ ಕುಮಾರನ್ ಆಶಾನ್ ಪ್ರತಿಷ್ಠಾನದ ಪ್ರಶಸ್ತಿಗಳು ಇವರಿಗೆ ಬಂದಿವೆ. ಪ್ರಸ್ತುತ ತಿರುಮಲೇಶ್ ನಿವೃತ್ತರಾಗಿ ಹೈದರಾಬಾದಿನಲ್ಲಿ ನೆಲೆಸಿದ್ದಾರೆ.