(ಲೇಖಕರ ಸಂದರ್ಶನದಿಂದ ಆಯ್ದ ಮಾತುಗಳು)
A Kannada book by Akshara Prakashana / ಅಕ್ಷರ ಪ್ರಕಾಶನ
ಆನಂದ ಝುಂಜರವಾಡ (೨೫-೬-೧೯೫೨) ಮೂಲತಃ ಬಾಗಿಲುಕೋಟೆಯವರು. ಮಾಧ್ವ ಹಾಗೂ ಮಹಾರಾಷ್ಟ್ರದ ಸಂತ ಪರಂಪರೆಯ ದಟ್ಟ ವಾತಾವರಣವಿದ್ದ ಮನೆತನದ ಪರಿಸರದಲ್ಲಿ, ಸಾವಿರಾರು ಗ್ರಂಥರಾಶಿಗಳ ಸಾಂಗತ್ಯದಲ್ಲಿ ಬೆಳೆದ ಬಾಲ್ಯ ಅವರದು. ಅರೆಬರೆ ಶಿಕ್ಷಣ, ಲೋಕೋಪಯೋಗಿ ಇಲಾಖೆಯಲ್ಲಿ ಮೈಲುಗೂಲಿ ಆಗಿ ರಸ್ತೆಗೆ ಕುದಿವ ಡಾಂಬರನ್ನು ಸುರಿವ ಅನುಭವ, ಇವರ ಸೃಷ್ಟಿಶೀಲತೆಗೆ ಭಾಷೆಯ ದಾರಿಯನ್ನು ನಿರ್ಮಿಸಿಕೊಳ್ಳುವ ರೂಪಕವಾಗಿಯೂ ಒಳಮನಸ್ಸಿನ ಗುಪಿತವಾಗಿ ಇಂಗಿರಬೇಕು. ಇವರ ಹಲವಾರು ಕಾವ್ಯ ಸಂಗ್ರಹಗಳು ಪ್ರಕಟವಾಗಿವೆ. `ಪ್ರೇತಕಾಂಡ' ಒಂದು ಹಂತದವರೆಗಿನ ಅವರ ಸಮಗ್ರ ಕಾವ್ಯ ಸಂಗ್ರಹವಾದರೂ ನಂತರವೂ ಇನ್ನೂ ಮೂರು ಸಂಕಲನಗಳು ಪ್ರಕಟವಾಗಿವೆ. ಪ್ರಸನ್ನವೆಂಕಟದಾಸರ ಬದುಕನ್ನು ಕುರಿತು ಇವರು ಬರೆದ ನಾಟಕ `ಹಕ್ಕಿಯ ಹೆಗಲೇರಿ' ಪ್ರಯೋಗಗಳನ್ನು ಕಾಣುತ್ತಲೇ ಇದೆ. ಹಲವು ಚಿಂತನಶೀಲ ಬರಹಗಳ ಸಂಗ್ರಹಗಳೂ ಪ್ರಕಟವಾಗಿವೆ. ಟಿಳಕರ `ಗೀತಾ ರಹಸ್ಯ'ದ ಆಲೂರರ, ಕೆರೂರು ವಾಸುದೇವಾಚಾರ್ಯರ ಅನುವಾದದ ಎರಡನೇ ಆವೃತ್ತಿಯನ್ನು ಇವರು ಸಂಪಾದಿಸಿಕೊಟ್ಟಿದ್ದಾರೆ. ೩೭ ವರ್ಷ ನ್ಯಾಯಾಂಗದಲ್ಲಿ ಕರಣಿಕರಾಗಿ ದುಡಿದು, ಈಗ ನಿವೃತ್ತ ಬದುಕನ್ನು ಅವರ ಪ್ರೀತಿಯ ಕವಿ ಬೇಂದ್ರೆ ಅವರ ನೆಲೆಯಾದ ಧಾರವಾಡದಲ್ಲಿ ನಡೆಸಿದ್ದಾರೆ. ಪು.ತಿ.ನ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಮುದ್ದಣ್ಣ ಪ್ರಶಸ್ತಿ, ದಿನಕರ ದೇಸಾಯಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ ಇವು ಅವರಿಗೆ ಸಂದ ಹಲವು ಪ್ರಶಸ್ತಿಗಳಲ್ಲಿ ಕೆಲವು.