ಈಗ ನಾನು ಮೊದಲು ಹೇಳಬೇಕಾಗಿರುವ ಮಾತು ಕೃತಜ್ಞತೆಯದು. ಈ ಪುಸ್ತಕ ಮೊದಲು ಪ್ರಕಟವಾದದ್ದು ೧೯೫೨ರಲ್ಲಿ. ಆಗತಾನೆ ಇಂಡಿಯದ ಈಗಿನ ರಾಜ್ಯನಿಬಂಧನೆಯ ಗ್ರಂಥ ರಾಷ್ಟ್ರಾಧ್ಯಕ್ಷರಿಂದ ರಾಷ್ಟ್ರದ ಪರವಾಗಿ ಅಂಗೀಕೃತವಾಗಿತ್ತು. ನಮ್ಮ ಮಹಾಜನ ರಾಷ್ಟ್ರಕ ತತ್ತ್ವಗಳನ್ನೂ ರಾಜ್ಯಸಂಸ್ಥೆಯ ಅಂಗಗಳನ್ನೂ ತಿಳಿದುಕೊಳ್ಳಲು ಕುತೂಹಲವುಳ್ಳವರಾಗಿರಬಹುದೆಂಬ ಆಶೆ-ಉತ್ಸಾಹಗಳಲ್ಲಿ ಇದನ್ನು ಬರೆದದ್ದು. ಒಂದು ಮಾತನ್ನು ವಿಶೇಷವಾಗಿ ಹೇಳಬೇಕೆನಿಸುತ್ತದೆ. ನಮ್ಮ ದೇಶಕ್ಕೆ ಪ್ರಜಾರಾಜ್ಯ ಕ್ರಮವನ್ನು ತಂದುಕೊಂಡಿದ್ದೇವೆ. ಇದನ್ನು ಆಗಾಗ ಶೋಧಿಸಿ ಕ್ರಮಪಡಿಸುವುದು ಸಾಧ್ಯ. ಆದರೆ, ಜನದಲ್ಲಿ: (೧) ರಾಷ್ಟ್ರಕತತ್ತ್ವ, (೨) ನ್ಯಾಯನಿಷ್ಠೆ, (೩) ನೀತಿದಾರ್ಢ್ಯ, (೪) ಸೌಜನ್ಯ, ಇವು ಇದ್ದಲ್ಲದೆ ಎಂಥ ರಾಜ್ಯವ್ಯವಸ್ಥೆಯೂ ಜನಕ್ಕೆ ಸುವ್ಯವಸ್ಥೆ ಎನಿಸಲಾರದು. ಜನದಲ್ಲಿ ನೀತಿ ಸಂಪತ್ತು ಬೆಳೆದಂತೆ ಅವರ ರಾಜಕೀಯ, ಆರ್ಥಿಕ, ಸಾಮಾಜಿಕ ಸೌಕರ್ಯಗಳು ಬೆಳೆಯುತ್ತವೆ. ಇದಕ್ಕೆಲ್ಲ ಸಾಧಕವಾದದ್ದು: (೧) ರಾಷ್ಟ್ರಕಪ್ರಜ್ಞೆ, (೨) ರಾಜಕೀಯವಿವೇಕ. ಈ ಎರಡು ಗುಣಗಳನ್ನು ಪ್ರಚಾರಪಡಿಸಲು ಈ ಸಣ್ಣ ಪ್ರಯತ್ನ ಸಾಧನವಾಗಲಿ. ರಾಷ್ಟ್ರ-ರಾಷ್ಟ್ರಕ ಸಂಬಂಧದ ಭಾವನೆಯೂ ರಾಷ್ಟ್ರಕ ಕರ್ತವ್ಯವೂ ಸರ್ವಸಾಮಾನ್ಯ ಧರ್ಮದ ಒಂದು ಮುಖ್ಯಾಂಶವೆಂಬ ಭಾವನೆಯು ನಮ್ಮ ದೇಶಕ್ಕೆ ಹೊಸತೆಂದು ಕಾಣುತ್ತದೆ. ಇಂಥಾ ಭಾವನೆಯನ್ನು ಪ್ರಚಾರಪಡಿಸುವುದು ಈ ಗ್ರಂಥದ ಉದ್ದೇಶ.