ಇದು ಈಶ್ವರ ಕವಿ ವಿರಚಿತ ‘ಕವಿಜಿಹ್ವಾಬಂಧನ'ದ ಸಂಗ್ರಹ. ಹಿಂದಿನ ಲಕ್ಷಣ ಗ್ರಂಥಕರ್ತರಾದ ವಾಮನ ಭಾಮಹಾದಿಗಳು ತಮ್ಮ ಗ್ರಂಥಗಳಲ್ಲಿ ಬರಿಯ ಕಾವ್ಯಲಕ್ಷಣಗಳನ್ನು ಮಾತ್ರ ಹೇಳದೆ, ವ್ಯಾಕರಣ, ನ್ಯಾಯಾದಿಗಳ ಪ್ರಯೋಗವನ್ನೂ ಸ್ವಲ್ಪ ಸ್ವಲ್ಪ ಸ್ಪರ್ಶಿಸಿದ್ದರು. ಕವಿಯಾದವನಿಗೆ ಬರಿಯ ವ್ಯಾಕರಣವಾಗಲಿ, ಬರಿಯ ಛಂದಸ್ಸಾಗಲಿ, ಬರಿಯ ಅಲಂಕಾರವಾಗಲಿ, ಬರಿಯ ನಿಘಂಟಾಗಲಿ ತಿಳಿದರೆ ಸಾಲದು, ಎಲ್ಲವೂ ಬೇಕು ಎಂಬುದು ಅವರ ಭಾವ. ಅದೇ ಸಂಪ್ರದಾಯ ಮುಂದೂ ಕೆಲವು ಕಾಲ ನಡೆದುಕೊಂಡು ಬಂತು. ಈಶ್ವರ ಕವಿಯೂ ಆ ಸಂಪ್ರದಾಯವನ್ನೇ ಅನುಸರಿಸಿರುವಂತೆ ತೋರುತ್ತದೆ. ಆದ್ದರಿಂದ ಕವಿಜಿಹ್ವಾಬಂಧನವೆಂದರೆ ಕವಿಯ ನಾಲಗೆಗೆ ಛಂದಸ್ಸಿನ ಕಟ್ಟು ಒಂದೇ ಅಲ್ಲ, ಲಕ್ಷಣಶಾಸ್ತ್ರದೊಳಗೆ ಸೇರುವ ಮಿಕ್ಕೆಲ್ಲ ಶಾಸ್ತ್ರಗಳ ಕಟ್ಟೂ ಎಂದು ಸಾರ. ಇದನ್ನು ಸಂಗ್ರಹಿಸಿ ಕೊಟ್ಟು ಎ. ಆರ್. ಕೃಷ್ಣಶಾಸ್ತ್ರಿಗಳು ಕನ್ನಡಿಗರಿಗೆ - ಕನ್ನಡ ಕಾವ್ಯಾಸ್ವಾದಕರಿಗೆ ಮಹತ್ತಾದ ಉಪಕಾರವನ್ನು ಮಾಡಿದ್ದಾರೆ.