ದಾದಾಭಾಯಿ ನವರೋಜಿಯವರ ಈ ಸಂಕ್ಷೇಪವಾದ ಜೀವನ ಚರಿತ್ರೆ ಸುಮಾರು ೩೨ ವರ್ಷಗಳ ಹಿಂದೆ (೧೯೧೮) ಮೊದಲು ಪ್ರಕಟವಾದದ್ದು. ಈಗ ಅದನ್ನು ಅಲ್ಲಲ್ಲಿ ಸ್ವಲ್ಪ ವಿಸ್ತರಿಸಿ ಪರಿಷ್ಕಾರ ಮಾಡಿ ಪ್ರಕಟಿಸಿದೆ. ಒಂದು ಜನಾಂಗದ ಚರಿತ್ರೆ ಒಂದು ಮಹಾಪುರಾಣದಂತೆ. ಅದು ಒಂದು ದಿವಸದ ಅಥವಾ ಒಂದು ವರ್ಷದ ಕಥೆಯಲ್ಲ; ಒಬ್ಬ ಮನುಷ್ಯನ ಅಥವಾ ಒಂದು ಸಣ್ಣ ಗುಂಪಿನ ಕಥೆಯಲ್ಲ. ಅದು ಹತ್ತಾರು ವರ್ಷಕಾಲ ಸಾವಿರಾರು ಮಂದಿಯಿಂದ ಕೂಡಿ ನಡೆದುಕೊಂಡು ಬಂದಿರುವ ವಿಸ್ತಾರ ಪ್ರಸಂಗ. ಒಂದು ದೇಶದ ಜನತೆಯ ಜೀವನ ಒಂದು ದೊಡ್ಡ ನದಿಯ ಪ್ರವಾಹದಂತೆ. ಕಾವೇರೀನದಿ ಅದರ ಹುಟ್ಟುನಾಡಾದ ಕೊಡಗಿನಲ್ಲಿ ಸಣ್ಣ ಹೊಳೆಯಂತೆ ಕಾಣುತ್ತದೆ, ಸಮುದ್ರ ಸೇರುವ ಬಳಿ ಕೊಲ್ಲಡಂ ಎಂಬಲ್ಲಿ ಸಮುದ್ರದಂತೆ ಅಪಾರವಾಗುತ್ತದೆ. ಅದು ಹಾಗೆ ಬೆಳೆಯಲು ಅದರ ದಾರಿಯಲ್ಲಿ ನೂರಾರು ತೊರೆಗಳೂ ಹಳ್ಳಗಳೂ ಹೊಳೆಗಳೂ ಈ ಪಕ್ಕ ಆ ಪಕ್ಕಗಳಿಂದ ಹರಿದುಬಂದು ಅಲ್ಲಲ್ಲಿ ಅದರೊಳಕ್ಕೆ ಸೇರಿದ್ದು ಕಾರಣವಲ್ಲವೆ? ಹಾಗೆ ಕಾಲಾನುಕಾಲದಲ್ಲಿ ಆದ ಬೆಳೆವಣಿಗೆ ನಮ್ಮ ಸ್ವಾತಂತ್ರ್ಯ ಸಮಾರಂಭದ್ದು. ಈ ನದಿ ಗಾಂಧಿಘಟ್ಟದಲ್ಲಿ ಇಷ್ಟು ದೊಡ್ಡದಾಗಲು ಅದಕ್ಕೆ ಎಷ್ಟೋ ಉಪನದಿಗಳು ಸೇರಬೇಕಾದದ್ದಿತ್ತು. ಅದಕ್ಕೆ ಕಾಲ ಸಹಾಯ ಬೇಕಿತ್ತು. ಅಲ್ಲಿಯವರೆಗೆ ಆ ನದಿಯನ್ನು ಹರಿಯಿಸಿಕೊಂಡು ಬಂದು ಉಪನದಿಗಳ ಬರುವಿಕೆಗೆ ಅನುಕೂಲ್ಯವನ್ನುಂಟುಮಾಡಿದವರು ಗಾಂಧಿಯವರ ಪೂರ್ವಾಚಾರ್ಯರು. ಆ ಹಿರಿಯ ದೇಶಭಕ್ತರೂ ಗಾಂಧಿಯವರಂತೆಯೇ ನಮ್ಮ ಭಕ್ತಿ ಕೃತಜ್ಞತೆಗಳಿಗೆ ಅಧಿಕಾರಿಗಳಾಗಿದ್ದಾರೆ. ಅವರಲ್ಲಿ ಅಗ್ರಗಣ್ಯರು ದಾದಾಭಾಯಿ ನವರೋಜಿಯವರು.