ವಾಚಕರಿಗೆ ಈ ಪುಸ್ತಕದಲ್ಲಿ ಇಲ್ಲಲ್ಲಿ ಚರ್ವಿತಚರ್ವಣದ ಅನುಭವವಾಗಬಹುದು. ಈ ಉಪನ್ಯಾಸಗಳು ಅನೇಕ ಸಂದರ್ಭಗಳಲ್ಲಿ ಅನೇಕ ವಿಧದ ಗೋಷ್ಠಿಗಳಿಗೆ ಕೊಟ್ಟವಾದ ಕಾರಣ, ಮುಖ್ಯಾಭಿಪ್ರಾಯಗಳು ಆಗಾಗ ಪುನರುಕ್ತವಾಗಿರುವುದು ಸ್ವಾಭಾವಿಕ. ಪುನರುಕ್ತಿಗಳನ್ನೆಲ್ಲ ತೆಗೆದುಹಾಕುವ ಪ್ರಯತ್ನ ಮಾಡಿದ್ದಿದ್ದರೆ ಉಪನ್ಯಾಸಧೋರಣೆಯ ನೈಜತೆಗೆ ಊನವಾಗುತ್ತಿತ್ತೇ ಹೊರತು ಗುಣವೇನೂ ಉಂಟಾಗುತ್ತಿರಲಿಲ್ಲ. ಅದಕ್ಕೆ ಬದಲಾಗಿ ಹೊಸದಾಗಿಯೇ ಬರವಣಿಗೆ ಆಗಬೇಕಾಗುತ್ತಿತ್ತು. ಅದಕ್ಕೆ ಬೇಕಾದ ಬಿಡುವು ನನಗಿಲ್ಲ; ಮತ್ತು ಹೊಸಗ್ರಂಥ ಉದ್ದಿಷ್ಟವಾದದ್ದೂ ಅಲ್ಲ. ವಾಚಕರು ನನ್ನ ಈ ಸಂದರ್ಭವನ್ನರಿತು, ಸಹನೆ ತೋರಬೇಕೆಂದು ಬೇಡುತ್ತೇನೆ. ಸಾಹಿತ್ಯದ ಉಪಕಾರ ಮನೋರಂಜನೆ ಮಾತ್ರವಲ್ಲ; ಅದು ಜೀವನ ಪ್ರಯುಕ್ತವಾದ ಒಂದು ಶಕ್ತಿ–ಮಹಾಶಕ್ತಿ, ಎಂಬುದು ಈ ಗ್ರಂಥದ ಮುಖ್ಯಾಶಯ. ಸಾಹಿತ್ಯಶಕ್ತಿಗೆ ನಿದರ್ಶನಸ್ವರೂಪವಾದ ವಾಲ್ಮೀಕಿ ವ್ಯಾಸರ ಭಾವಚಿತ್ರಗಳ ಜೊತೆಗೆ ಸಾಹಿತ್ಯಶಕ್ತಿಯಿಂದ ಪ್ರೇರಿತನಾಗಿ ಇಂಗ್ಲೆಂಡಿನ ರಾಜ್ಯನಿರ್ವಾಹಮಾಡಿ ಜಗತ್ಪ್ರಸಿದ್ಧನಾದ ಗ್ಲ್ಯಾಡ್ಸ್ಟನ್ನಿನ ಭಾವಚಿತ್ರವನ್ನು ಈಗ ಹೊಸದಾಗಿ ಸೇರಿಸಿದೆ. ‘ಸಾಹಿತ್ಯಶಕ್ತಿ’ ಎಂದರೆ ‘ಶಾಸ್ತ್ರದ ಆಸಕ್ತಿ’ ಎಂದು ಯಾರೂ ಅರ್ಥ ಮಾಡಲಾರರು. ವಿಜ್ಞಾನಾದಿಶಾಸ್ತ್ರಗಳು ನಮ್ಮ ದೇಶದಲ್ಲಿ ಅಭಿವೃದ್ಧಿ ಪಡೆಯಬೇಕೆಂದು ಆಶೆಪಟ್ಟುಕೊಂಡಿರುವವರಲ್ಲಿ ನಾನೂ ಒಬ್ಬ.