ಮುಖ್ಯವಾಗಿ ಬಾಲಕರನ್ನು ಸಂತೋಷಗೊಳಿಸಲು ಹುಟ್ಟಿದ್ದು ಈ ಪುಸ್ತಕ. ಕಲ್ಪಿತ ಕಥೆಗಳಿಗೆ ನಮ್ಮ ಇಂಡಿಯಾ ದೇಶವು ತೌರುಮನೆಯೆಂದು ಹೇಳಬಹುದಾದರೂ, ಈ ಬಗೆಯ ಕಥೆಗಳು ಅನ್ಯ ದೇಶಗಳಲ್ಲಿಯೂ ವಿಶೇಷವಾಗಿವೆಯೆಂದು ಹಿಂದಿನ ಹೊತ್ತಗೆ “ಬೆಕ್ಕೋಜಿ”ಯಿಂದಲೇ ವ್ಯಕ್ತವಾಗುತ್ತದೆ. ಕಟ್ಟುಕಥೆಗಳು ಮಕ್ಕಳ ಮನಸ್ಸಿಗೆ ಉಲ್ಲಾಸವನ್ನೂ ಉತ್ಸಾಹವನ್ನೂ ಉಂಟುಮಾಡಿ. ಅವರ ಊಹಾಶಕ್ತಿಯನ್ನು ಹೆಚ್ಚಿಸಿ, ಅವರಲ್ಲಿ ಒಳ್ಳೆಯ ಭಾವನೆಗಳನ್ನು ನೆಲೆಗೊಳಿಸುತ್ತವೆ: ಆದಕಾರಣ ಇಂತಹ ಪುಸ್ತಕಗಳು ಮಕ್ಕಳುಳ್ಳವರ ಆದರಣೆಗೆ ಪಾತ್ರವಾದಾವೆಂದು ನಂಬಿಕೆ. ಈ ಕಥೆಗಳಿಗೆ ಅಲ್ಲಲ್ಲಿ ಚರಿತ್ರೆಯ ಸಂಬಂಧವಿರುವುದಾದರೂ, ಅವುಗಳೆಲ್ಲವೂ ಕೇವಲ ಇತಿಹಾಸವೆಂದು ಹೇಳಲಾಗುವುದಿಲ್ಲ.