ಕಾಲಿದಾಸಕವಿಯ ಶಾಕುಂತಲ ನಾಟಕದಲ್ಲಿಯ ಕೆಲವು ಸರಸ ಸಂದರ್ಭಗಳ ಗೀತಾನುವಾದಗಳು ಈ ಪುಸ್ತಕದಲ್ಲಿರತಕ್ಕವು. ಅಲ್ಲಿ ಸಂಸ್ಕೃತ ಪದ್ಯವೋ ವಚನವೋ ಆಗಿರುವುದು ಇಲ್ಲಿ ಕನ್ನಡ ಹಾಡಾಗಿದೆ. ಗೋವಿನ ಕಥೆಯಲ್ಲಿ ಗೊಲ್ಲಗೌಡನು ಕೊಳಲನೂದಿದನಂತೆ. ಅವನಂತೆ ಈಗಲೂ ಹಳ್ಳಿಗಾಡುಗಳಲ್ಲಿ ದನಮೇಯಿಸುವವರು ತಾವುತಾವೇ ಹಾಡಿಕೊಳ್ಳುತ್ತಾರೆ; ಕೊಳಲು ಊದುತ್ತಾರೆ. ಬೆಳಗಿನ ಜಾವದಲ್ಲಿ ಹೊಲಗದ್ದೆಗಳಿಗೆ ದನಕರು ನಡಸಿಕೊಂಡು ಹೋಗುವವರೂ ಬಂಡಿ ಹೊಡೆದುಕೊಂಡು ಹೋಗುವವರೂ ಕೊರಲ ದನಿಯಿಂದಲೋ ತುಟಿಯ ಸಿಳ್ಳಿನಿಂದಲೋ ಪಾಡಿಕೊಳ್ಳುತ್ತಾರೆ. ಇವರೇನೂ ಸ್ವರಸಾಧನೆ ಮಾಡಿದವರಲ್ಲ, ರಾಗಶುದ್ಧಿ ಬಲ್ಲವರಲ್ಲ, ಶ್ರುತಿ ತಾಳ ತಿಳಿದವರಲ್ಲ. ಅವರ ಮನಸ್ಸಿನ ಉಲ್ಲಾಸ ಅವರ ಸಂಗೀತ. ಮನುಷ್ಯಸ್ವಭಾವದ ಉಲ್ಲಾಸವು ಕಲೆಗೆ ಮೂಲದ್ರವ್ಯವಾದರೆ, ಕಲೆಯನ್ನು ಪರಿಷ್ಕಾರಪಡಿಸಿ ಮತ್ತಷ್ಟು ಸೊಗಸುಗೊಳಿಸುವ ಶಾಸ್ತ್ರವು ಮನುಷ್ಯಸ್ವಭಾವದ ಅಂತರಂಶವಾದ ಬುದ್ಧಿಯ ಪ್ರಭಾವ. ಮನುಷ್ಯನು ತನ್ನ ಕಲಾನುಭವಗಳನ್ನು ಆಗಾಗ ಪರೀಕ್ಷೆ ಮಾಡಿಕೊಳ್ಳುತ್ತ, ಸುಖಕರ ಪ್ರಯೋಗಗಳನ್ನು ಕಂಡುಕೊಳ್ಳುತ್ತ, ಮನಸ್ಸೊಪ್ಪಿದ ಲಕ್ಷಣಗಳನ್ನು ಪರೀಕ್ಷಿಸಿ ಗುರುತುಮಾಡಿಕೊಳ್ಳುತ್ತ ಹೋಗುತ್ತಾನೆ. ಹೀಗೆ ಪ್ರಕೃತಿಸಿದ್ಧವಾದ ನಾದಸಾಮಗ್ರಿಯು ಬುದ್ಧಿಕ್ರಿಯೆಯಿಂದ ಸಂಸ್ಕೃತಿಪಡೆದು ಸಂಗೀತವಾಗುತ್ತದೆ. ಆ ಸಂಸ್ಕಾರವಿಧಾನವೇ ಶಾಸ್ತ್ರ. ಶಾಸ್ತ್ರಕ್ರಿಯೆಯಿಂದ ಕಲೆಯ ಉತ್ಕೃಷ್ಟತೆ.