ನಮ್ಮ ಪೂರ್ವಿಕರು ಮಕ್ಕಳಿಗೆ ಹೆಸರಿಡುವುದರಲ್ಲಿ ಒಂದು ವಿಶೇಷ ಪದ್ಧತಿಯನ್ನಿಟ್ಟುಕೊಂಡಿದ್ದರು. ಮೊದಲ ಎರಡು ಮೂರು ಮಕ್ಕಳು ಕಳೆದುಹೋಗಿದ್ದರೆ, ಮೂರನೆದಕ್ಕೋ ನಾಲ್ಕನೆಯದಕ್ಕೋ ಗುಂಡಪ್ಪ, ಕಲ್ಲಪ್ಪ, ತಿಪ್ಪಯ್ಯ, ಹುಚ್ಚಯ್ಯ- ಎಂದು ಹೆಸರು ಕೊಡುತ್ತಿದ್ದರು. ಅದರ ಭಾವ ಆ ಮಗುವಾದರೂ ಎಲ್ಲಾದರೂ ಗುಂಡುಕಲ್ಲಿನಂತೆ, ತಿಪ್ಪೆಯ ರಾಶಿಯಂತೆ, ಆಯುಸ್ಸುಂಟಾಗಿ ಬಾಳಿಕೊಳ್ಳಲಿ-ಎಂದು. ಈ ಗ್ರಂಥ ಮೊದಲು ಪ್ರಕಟವಾದಾಗ ಇದ್ದ ಮನೋಭಾವ ಅಂಥಾದ್ದು. ಇದು ಪಂಡಿತರನ್ನೂ ಪ್ರಸಿದ್ಧರನ್ನೂ ಪುಷ್ಟರನ್ನೂ ಉದ್ದೇಶಿಸಿದ್ದಲ್ಲ. ಬಹುಸಾಮಾನ್ಯರಾದವರ ಮನೆಯ ಬೆಳಕಿಗೆ ಇದು ಒಂದು ತೊಟ್ಟಿನಷ್ಟು ಎಣ್ಣೆಯಂತಾದರೆ ನನಗೆ ತೃಪ್ತಿ. ಕಗ್ಗ ಜೀವನದ ಆಳವಾದ ಪ್ರಶ್ನೆಗಳನ್ನು ಪರಿಶೋಧಿಸುತ್ತದೆ, ನಿರಂತರವಾಗಿ ಬದಲಾಗುವ ಜಗತ್ತಿನಲ್ಲಿ ಸಮತೋಲಿತ ಜೀವನವನ್ನು ಮುನ್ನಡೆಸಲು ನಮಗೆ ಸಲಹೆ ನೀಡುತ್ತದೆ. ಆದ್ದರಿಂದ, ಕಗ್ಗದ ಅನೇಕ ಪದ್ಯಗಳ ಸಂದೇಶವು ”ಸಮತ್ವ” ಆಗಿದೆ.